Wednesday 28 September 2011

ಮಳೆಯ(ನದ) ಕಾರ್ಮೋಡ


ಬಾನಿನ ತುಂಬೆಲ್ಲಾ
ತುಂಬಿಹುದು ಕರಿಮೋಡ 
ಅದು ಭೂಮಿಯ ತಂಪು 
ಮಾಡುವುದು ನೋಡ???


ಮನದಲ್ಲಿ ತುಂಬಿಹೆ
ಚಿಂತೆಯ ಕಾರ್ಮೋಡ 
ಅದು ತೋರುವುದು 
ಚಿತೆಗೆ ದಾರಿಯ ನೋಡ!!!!!


ಕರಿ ಮುಗಿಲ ನೋಡು 
ಜೊತೆಗೆ ಧ(ರ)ಣಿಯಾ ನಗು 
ಕಪ್ಪು ಮೆಘದೊಳಗಿಂದ 
ಇನುಕುವನು ಬಿಳಿ ಚಂದ್ರ!!!!!? 


ಮನಸು ತಿಳಿಯಾಗಲಿಲ್ಲ 
ಬರಿಯ ಯೋಚನೆಯಿಂದ 
ಮಂಕಾದ ಮುಖದಲ್ಲಿ 
ಇಣುಕಲೂ ಇಲ್ಲ ಕಿರುನಗೆ!!!!!!


ಕಪ್ಪು ಮೋಡದಿಂದ ಮಳೆ 
ಚಿಂತೆಯಿಂದ ಕಣ್ಣಿರು 
ಮಳೆ ಬಂದರೆ ಕುಣಿವರು ಜನ 
ಕಣ್ಣಿರಿಂದೇಕೆ ನೆನೆವುದೋ ಮನ??!!!!!

ಮಳೆ


ಕತ್ತಲೆಯ ಕಾರ್ಮೋಡ ಕವಿದು 
ಆಗಿದೆ ಮನವೆಲ್ಲ ಚಿಂತೆಯ ಗೂಡು 
ಹಣ್ಣಾದೆ ನಿನ್ನ ನೆನೆ ನೆನೆದು 
ಹೇಗಿರುವೆ ನನ್ನ ಪ್ರಿಯ ವಧು?


ಇರುಳ ಕರಿ ಪರದೆ ಸರಿಸಿ 
ಅಮೃತದೊಲವಾ ಹರಿಸಿ 
ನಿನ್ನ ಪ್ರಿಯನನ್ನಾಲಂಗಿಸು
ಸಿಹಿ ಮುತ್ತ ನೀಡಿ 


ಚಂದ್ರನ ಮುತ್ತಿರುವ ತಾರೆಯಂತೆ 
ನಿನ್ನಿ ವದನದ ಸುತ್ತ ಮುಂಗುರುಳು 
ಹೂವ ಮುತ್ತಿಕ್ಕುವ ದುಂಬಿಯಂತೆ 
ನಿನ್ನ ಮುಖಕ್ಕೆ ನನ್ನೀ ಮುತ್ತುಗಳು 


ಹಗಲು ಇರುಳುಗಳು ಪ್ರಕೃತಿಯಾಟ
ನೋವು ನಲಿವುಗಳಲ್ಲಿ ಬಾಳಿನ ಪುಟ 
ಹೀಗೆ ಕಳೆದವೆಷ್ಟೋ ಸಂವತ್ಸರ 
ನಿನ್ನ ಈ ಎಲ್ಲ ನೆನಪುಗಳು ಅಮರ

ಮಧುರ ನೆನಪು


ಎದೆಯ ಕಡಲಿನಿಂದ 
ಹೊಮ್ಮಿದ ಮಧುರ ನೆನಪು 
ಜೀವನದ ಕಹಿ ವೇಳೆಯಲಿ 
ಜೊತೆಗಿರುವ ಸಿಹಿ ನೆನಪು 


ಸೂರ್ಯ ರಶ್ಮಿ ಸೋಕಿ 
ಮಂಜು ಕರಗುವಂತೆ 
ನೆನೆಪಿನಾಳದ ನೆನೆಪಿಂದ 
ಮರೆಯಿತೊಂದು ಕ್ಷಣ ನೋವು 


ನೆನಪ ಎಳೆಯ ಎಳೆದಾಗ 
ನೆನಪಾಗುವುದು ಮನದಲ್ಲಿ 
ಬಾಲ್ಯದ ತುಂಟಾಟಗಳು 
ಮಸುಕಾದ ನೆನೆಪುಗಳು 


ಗೆಳೆತಿಯರ ಜೊತೆಗೂಡಿ  ಆಡಿದ 
ಗೆಳೆಯರ ಜೊತೆ ಜಗಳ ಕಾದ
ಮರೆಯಲಾಗದ ಸವಿನೆನಪುಗಳ 
ಸಂಗ್ರಹವೇ ನಮ್ಮ ಬಾಳು

ನಿನ್ನ ನೆನಪು

ನಿನ್ನ ನೆನಪು ಸ್ಪೂರ್ತಿ ಏನಗೆ
ಬಾಳ ಕಥೆ ಬರೆಯಲು
ನಿನ್ನ ಮಾತು ಅಮೃತ ಸಿಂದು
ಸ್ನೇಹ ಪುಟದಲೂ

ನಿನ್ನ ನೋಟ ಚಿರವು
ಎನ್ನ ಕಣ್ಣಿನೊಳಗು
ನಿನ್ನ ಪ್ರೀತಿ ಅಮರ
ಎನ್ನ ಹೃದಯದೊಳಗೂ

ಮಾತಿನಲ್ಲೂ ಪ್ರೀತಿ ತೋರುವ
ನಿನ್ನ ಕಂದರೆನಗೆ ಒಲವು
ನಮ್ಮಿಬ್ಬರ ಹೃದಯ ಬೆಸೆದರೆ
ನಮ್ಮ ಪ್ರೇಮ ಎಲ್ಲಿರದು

ಆ ತುಟಿಯಂಚಿನ ಕಿರುನಗೆ
ಆ ಕಣ್ಣಂಚಿನ ತುಂಟನೋಟ
ನನ್ನೆದೆಯಲಿ ಅಳಿಯದಿರಲಿ
ನಿನ್ನನೆಂದು ನಾ ಮರೆಯದಿರಲಿ





Saturday 24 September 2011

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "

    










  ಎಷ್ಟೇ ಬೇಡವೆಂದರೂ ಒತ್ತಿಕೊಂಡು ಬರುವ ನೆನಪಿನ ಮಹಾಪುರವನ್ನು ತಡೆಯಲು ಸಾದ್ಯವೇ? ಹಾಗೆ ಬಂದ ಮಹಾಪುರದಲ್ಲಿ ಒಂದು ಬಿಂದಿಗೆಯಷ್ಟು ನೆನಪನ್ನು ನಿಮ್ಮ ಮುಂದೆ ಸುರಿಯುವ ಚಿಕ್ಕ ಪ್ರಯತ್ನ....
 
                  ಕಾಲೇಜಿಗೆ ಹೋಗಬೇಕೆಂಬ ಮಹದಾಸೆ ಹೊಂದಿದ್ದ ನೆತ್ರಕ್ಕನ ಕನಸಿಗೆ ಅವಳಪ್ಪ ತಣ್ಣಿರೆರೆಚಿದ್ದ ಟೈಲರಿಂಗ್ ಕ್ಲಾಸಿಗೆ ಸೇರಿಸಿದ್ದ. ಪಾಲಿಗೆ ಬಂದ್ದದ್ದು ಪಂಚಾಮೃತ ಎಂದುಕೊಂಡು ನೋವನ್ನು ನುಂಗಿಕೊಂಡಿದ್ದಳು. ನಾನು ಅವಳಿಗಿಂತ 2 ವರ್ಷ ಚಿಕ್ಕವಳು. ನನಗಿಂತ ದೊಡ್ಡವಳಾದರೂ, ನನ್ನ ಅತ್ಮಿಯ ಗೆಳತಿಯರ ಸಾಲಿಗೆ ಸೇರಿದ್ದಳು. 
                     
                 ನಮ್ಮ ಸ್ನೇಹಕ್ಕೆ ವಯಸ್ಸಿನ ಅಂತರ ಇರಲಿಲ್ಲ. ಹಾಗೆ 2  ವರ್ಷ ಕಳೆದು ಹೋಯಿತು. ನಾನು  ಕಾಲೇಜಿಗೆ ಹೋಗತೊಡಗಿದ್ದೆ. ವಾರಕ್ಕೊಮ್ಮೆ ಮನೆಗೆ ಬಂದಾಗ ತಪ್ಪದೆ ಅವಳನ್ನು ಬೇಟಿಯಾಗಿ ಎಲ್ಲಾ ಘಟನೆಗಳನ್ನು ವಿವರಿಸುತಿದ್ದೆ. ಅದನ್ನು ಕೇಳಿ ಕಾಲೇಜು ಜೀವನದ ಬಗ್ಗೆ ತಿಳಿದು ಕೊಳ್ಳುತ್ತಿದ್ದಳು. ಯಾವುದೇ ಹೊಸ ವಸ್ತು ಖರೀದಿಸಲಿ, ನನಗೆ ತೋರಿಸಿದೆ, ನನ್ನ ಮೆಚ್ಚುಗೆ ಪಡಿಯದೆ, ಉಪಯೋಗಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಾವಿಬ್ಬರು ಹಚ್ಚಿಕೊಂಡಿದ್ದೆವು. 
 
                 ಅದೊಂದು "ಕರಾಳ ದಿನ" ಬರದಿದ್ದರೆ,........    ನೆನಸಿಕೊಳ್ಳಲು ಭಯವಾಗತ್ತೆ....
          ಹೌದು ಅದೊಂದು ಭಯಂಕರ ದಿನ ನಮ್ಮೆಲ್ಲರ ಪಾಲಿಗೆ, ನಾನಾಗ 2  sem ಡಿಗ್ರಿಯಲ್ಲಿದ್ದೆ ರಜೆಯ ನಿಮ್ಮಿತ್ತ ಮನೆಗೆ ಬಂದಿದ್ದೆ, ನನ್ನ ಪಿ ಯು ಸಿ ಗೆಳೆತಿಯೊಬ್ಬಳು ತುಂಬಾ ದಿನದಿಂದ ಅವಳ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದಳು ಸರಿಯೆಂದು ಅವಳ ಮನೆಗೆ ಹೋಗಲು ಸಿದ್ದಳಾಗಿದ್ದೆ. ಹೋಗುವ ಮೊದಲನೇ ದಿನ ಸಾಯಂಕಾಲ ನನ್ನ ಮತ್ತು ನೆತ್ರಕ್ಕನ ಮಾಮೂಲಿ ಜಾಗದಲ್ಲಿ ಬೇಟಿಯಾಗಿ ಗೆಳತಿಯ ಮನೆಗೆ ಹೋಗುವುದಾಗಿ ಹೇಳಿದ್ದೆ. ಹೋಗಿ ಬೇಗ ಹಿಂತಿರುಗಿ ಬಾ ಎಂದಿದ್ದಳು. 
 
                     ನಾನು ನನ್ನ ಗೆಳತಿಯ ಮನೆಗೆ ಹೋಗಿ ಅವಾಗಾಗಲೇ 2  ದಿನವಾಗಿತ್ತು. 3 ನೇ ದಿನ ಪೇಪರ್ ನೋಡಿದಾಗ ಆಘಾತವಾಗಿತ್ತು. ನನ್ನ ಆಪ್ತ ಸ್ನೇಹಿತೆ  ನೆತ್ರಕಳ ದುರ್ಮರಣ ಸುದ್ದಿ ಅವಳ ಫೋಟೋದೊಂದಿಗೆ ಪ್ರಕಟವಾಗಿತ್ತು ನನ್ನ ಗೆಳತಿಯ ಮನೆಯ ಲ್ಯಾಂಡ್ ಲೈನ್ ಫೋನ್ ಹಾಳಗಿತ್ತು ಅದ್ದರಿಂದ ನನಗೆ ವಿಷಯ ತಿಳಿದಿರಲಿಲ್ಲ.ಹೇಗೋ ಆ ಕ್ಷಣ ನಾನು ಮನೆಗೆ ಹೊರಟು ಬಂದೆ ಆದರೆ ಆ ಹೊತ್ತಿಗಾಗಲೇ ಅವಳು ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋಗಿದ್ದಳು. 
 
         ಅಣ್ಣನ ಜೊತೆ ಗಣೇಶ ಹಬ್ಬಕ್ಕೆಂದು  ಹೊಸ ಬಟ್ಟೆ ತರಲೆಂದು ಹೋಗಿದ್ದವಳು ತಿರುಗಿ ಬಂದದ್ದು ನಿರ್ಜೀವವಾಗಿ. ದಾರಿಯಲ್ಲಿ ಕಬ್ಬಿಣದ  ಅದಿರು ಸಾಗಿಸುವ ಟ್ರಕ್ ಇವಳಣ್ಣನ ಬೈಕಿಗೆ ಡಿಕ್ಕಿ ಹೊಡೆದಿತ್ತು.  ಆ ರಭಸಕ್ಕೆ ಹಿಂದೆ ಕುಳಿತ ಇವಳು ಹಾರಿ ಬಿದ್ದಾಗ ಇವಳ ಗರ್ಭಕೋಶ ಒಡೆದು ಅತಿ ರಕ್ತ ಸ್ರಾವದಿಂದ ನರಳಿ ಆಸ್ಪತ್ರೆಗೆ ಸಾಗಿಸುವ ಸಾವನ್ನಪ್ಪಿದ್ದಳು. ಇದಾಗಿ ಇಂದಿಗೆ 4 ವರ್ಷಗಳೇ ಕಳೆದವು. ಗಣೇಶ ಹಬ್ಬ ಎಂದ ಕೂಡಲೇ ನಮ್ಮೆಲ್ಲರಿಂದ ದೂರವಾದ ಈ ಸ್ನೇಹಿತೆಯ ನೆನಪು ಹೃದಯ ಹಿಂಡುತ್ತದೆ. ನಿನ್ನ ಸ್ನೇಹಕ್ಕೆ ನಾನು ಚಿರಋಣಿ ಗೆಳತಿ.......
  

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "


Tuesday 20 September 2011

ಹೀಗೊಂದು ಪ್ರೇಮ ಕಥೆ

from google image search:-)from google image search:-)


    ಜಿಟಿ ಜಿಟಿ ಸದ್ದಿನೊಂದಿಗೆ ಮುಂಗಾರು ಆಗ ತಾನೆ ಆರಂಭವಾಗಿತ್ತು. ಬೆಳಿಗ್ಗೆಯ ಕಾಫಿ ಕುಡಿದು ಪೇಪರ್ ಮೇಲೆ ಕಣ್ಣಾಡಿಸುವಾಗ ಸಪ್ಲಿಮೆಂಟರಿ ಪೇಪರ್ ನ ಮುಂಗಾರು ಮತ್ತು ಪ್ರೀತಿ ಎಂಬ ತಲೆ ಬರಹದಡಿಯಲ್ಲಿನ ಕವನ ನನ್ನ ಗಮನ ಸೆಳೆಯಿತು. ಮುಂಗಾರಿನ ಮಳೆ ಹನಿಯ ನಿನಾದದೊಂದಿಗೆ, ತುಂತುರು ಹನಿಗಳ ತುಂಟಾಟಗಳೊಂದಿಗೆ, ಬರಡು ಭೂಮಿಯಲ್ಲಿ ಮೊಳಕೆಯೊಡೆಯುವ ಹಸಿರೆಲೆಯಂತೆ ಒಂಟಿ ಬಾಳಲ್ಲಿ, ಬರಿದಾದ ಮನಸಲ್ಲಿ ತಂಗಾಳಿ ತರುತ್ತದೆ, ಈ ಪ್ರೀತಿ. ನನಗೂ ನನ್ನ ಪ್ರೀತಿ ಸಿಕ್ಕಿದ್ದು, ಇಂತಹದ್ದೇ ಒಂದು ಮುಂಗಾರಿನ ಮಳೆಯಲ್ಲೇ ಅಲ್ವಾ?
                  ಆವತ್ತು ನನ್ನ ಪೋಸ್ಟ್ ಗ್ರಾಜುವೇಶನ್ ಡಿಗ್ರಿಯ ಮೆರಿಟ್ ಸೀಟ್ ಖಾತರಿ ಪಡಿಸಿಕೊಂಡು ಧಾರವಾಡದಿಂದ ನನ್ನೂರಾದ ಕಾರವಾರಕ್ಕೆ ಬರಲು ಬಸ್ ಸ್ಟಾಪ್ ನಲ್ಲಿ ಕಾಯುತ್ತಿರುವಾಗ ನನ್ನವಳ ನೋಡಿದ್ದು ಪ್ರೀತಿ ಆಗಿದ್ದು, ಆಶ್ಚರ್ಯವಾಗುತ್ತಿರಬೇಕಲ್ಲವೇ? ಆದರೆ ಇದು ನಿಜ. "ಲವ್ ಅಟ್ ಫಸ್ಟ್ ಸೈಟ್" ಎನ್ನುವ ಮಾತು ಆವತ್ತು ನಿಜ ಅನಿಸಿತು. ಸ್ನಿಗ್ದ ಚೆಲುವ ಸಿರಿ, ತಿಡಿದ ಹುಬ್ಬು, ಲಿಪ್ ಸ್ಟಿಕ್ ನ ಲೇಪನವಿಲ್ಲದೆಯೇ ಮಿಂಚುತಿರುವ ತುಟಿಗಳು, ಕಾಡಿಗೆ ಹಚ್ಚಿದ ಮೀನು ಕಣ್ಣುಗಳು, ನೀಳ ಕೇಶರಾಶಿ, ಕತ್ತರಿಸಿದ ಮುಂಗುರುಳು ಅವಳ ಕೆನ್ನೆಯನ್ನು ಮುತ್ತಿಡುತಿತ್ತು. ನಾನು ಮಂತ್ರ ಮುಗ್ದನಾಗಿದ್ದೆ. 
 
                    ಆದರೆ ಅವಳನ್ನು ಎಲ್ಲೋ ನೋಡಿದ ನೆನಪು:-) :-) ;-) ನೆನಪಾಗುತ್ತಿಲ್ಲ. ಅವಳನ್ನೇ ನೋಡುತ ನಿಂತೆ, ಇಲ್ಲ ನೆನಪಗುತ್ತಿಲ್ಲಾ.. ಅರೆ ಅವಳು ನನ್ನೇ ನೋಡಿ ನಗುತ್ತಿದ್ದಾಳೆ. ನನ್ನ ಕಡೆಗೆ ಬರ್ತಿದ್ದಾಳೆ ನನ್ನೆದೆ ನಗಾರಿ ಜೋರಾಗಿ ಬಡಿಯಲಾರಂಬಿಸಿತು. ಅದಕ್ಕೆ ಸಾತ್ ನೀಡುವಂತೆ ಜೋರಾಗಿ ಮಳೆ ಬೇರೆ, ಅವಳನ್ನು ಎದುರಿಸುವ ದೈರ್ಯ ಇಲ್ಲದಾಯಿತು. ಮುಖ ಬೇರೆಡೆಗೆ ತಿರುಗಿಸಿದೆ. ನನ್ನೆದುರಿಗೆ ಬಂದು ಹಾಯ್ ಎಂದಳು. ನಾನು ಸೌಮ್ಯ, ಸೌಮ್ಯವಾಗೆಂದಳು. ಸಾರೀ ಯಾರೆಂದು ಗೊತ್ತಾಗಲಿಲ್ಲ ಎಂದೆ. 'ಏ ಅನಿ ಇಷ್ಟು ಬೇಗ ನನ್ನ ಮರೆತು ಬಿಟ್ಯಾ? ನಾನ್ ಕಣೋ ಸೋನು ಅದೇ ನಿನ್ನ ನಾಗವೇಣತ್ತೆಯ ಮಗಳು' ಎಂದಳು. 
 
                    ನನಗೆ ಸ್ವರ್ಗಕ್ಕೆ ಮೂರೇ ಗೇಣು. ನನ್ನ ಸೋನು ನನ್ನ ಬಾಲ್ಯದ ಸ್ನೇಹಿತೆ ಸೋನು.. ಬಾಲ್ಯವನ್ನು ನನ್ನೊಟ್ಟಿಗೆ ಕಳೆದವಳು. ಹಿರಿಯರ ಮನಸ್ತಾಪ ನಮ್ಮನು ಬೇರೆ ಮಾಡಿತ್ತು. ಅಲ್ಲಿಂದ ನಮ್ಮ ನಂಟು ಕಳಚಿಹೋಗಿತ್ತು. ಅವರ ಕುಟುಂಬ ದೂರ ಹೊರಟು ಹೋಗಿತ್ತು. ಈಗ ನನಗೆ ನಿದಿ ಸಿಕ್ಕಂತಾಗಿತ್ತು.  ಎಲ್ಲಾ ನೆನಪು ಮನದಲ್ಲಿ ಹಾಯ್ದು ಹೋಯಿತು. ಅಷ್ಟರಲ್ಲೇ ನನ್ನ ಬಸ್ ಬಂದಿತ್ತು. ಈ ಬಸ್ ಬಿಟ್ಟರೆ ಬೇರೆ ಬಸ್ ಇರಲಿಲ್ಲ. ಅವಳನ್ನು ಬಿಟ್ಟು ಹೋಗುವ ಮನಸ್ಸು ಇರಲಿಲ್ಲ, ಏನು ಮಾಡುವುದೆಂದು ತಿಳಿಯಲಿಲ್ಲ. 'ನೀನು ಎಲ್ಲಿಗೆ ಹೋಗ್ತಾ ಇದೀಯಾ? ಎಂದು ಕೇಳಿದೆ. ಅವಳು ಕಾರವಾರಕ್ಕೆ ಹೋಗ್ತಿದ್ದೀನಿ ನನ್ನ ಫ್ರೆಂಡ್ ಕಾವ್ಯ ಅಂತಿದಾಳೆ, ಅವಳ ಎಂಗೆಜಮೆಂಟ್ ತುಂಬಾ ಫೋರ್ಸ್ ಮಾಡಿದ್ಲು ಅದ್ಕೆ ಹೋಗ್ತಿದೀನಿ ಎಂದಳು. 
 
        ಕಾವ್ಯ ನನ್ನ ಫ್ರೆಂಡ್ ಕಿರಣ್ ನ ತಂಗಿ ಒಹ್ ಎಂತ ಸುಯೋಗ ಎಂದುಕೊಂಡು ಇದನ್ನೇ ಅವಳಿಗೂ ಹೇಳಿದೆ ಇಬ್ಬರು ಬಸ್ ಹತ್ತಿ ಅಕ್ಕ ಪಕ್ಕ ಕುಳಿತು ಹರಟಿದೆವು. ಕಾರವಾರ ತಲುಪುವವರೆಗೂ, ನಮ್ಮ ಬಾಲ್ಯವನ್ನು ಮಗುಚಿ ಹಾಕಿದೆವು. ಇಷ್ಟು ದಿನದ ವಿರಹವನ್ನು ಕಣ್ಣಲ್ಲೇ ವಿನಿಮಯ ಮಾಡಿಕೊಂಡೆವು. 'ನಾನು 'ಅನಿ' ಅಂತ ಹೇಗೆ ಗೊತ್ತಾಯಿತು' ಅಂತ ಕೇಳಿದೆ?  ಅದಕ್ಕೆ 'ಮೊನ್ನೆ ತರಂಗದಲ್ಲಿ ನಿನ್ನ ಕವನ ನಿನ್ನ ಫೋಟೋದೊಂದಿಗೆ ಪ್ರಕಟವಾಗಿತ್ತು. ಅದಕ್ಕೆ ಮಾಹಿತಿ ಕೋರಿ ತರಂಗ ಕಚೇರಿಗೆ ಫೋನ್ ಮಾಡಿ ನಿನ್ನ ಬಗ್ಗೆ ತಿಳಿದುಕೊಂಡೆ ಅವರು ಕೊಟ್ಟ ಮಾಹಿತಿಯಿಂದ ನೀನೆ ನನ್ನ "ಅನಿ" ಅಂತ ಗೊತ್ತಾಯಿತು. ಆದರೆ ನಿನ್ನ ಇಷ್ಟು ಬೇಗ ಬೇಟಿ ಆಗ್ತೀನಿ ಅಂದುಕೊಂಡಿರಲಿಲ್ಲ ' ಎಂದಳು.
 
                ನೀನೆ ನನ್ನ "ಅನಿ" ಎಂಬ ಮಾತು ನನಗೆ ರೋಮಾಂಚನ ಮೂಡಿಸಿತು. " ನಾನು ನಿನ್ನ ಎಷ್ಟು ಮಿಸ್ ಮಾಡ್ಕೊಂಡಿದ್ದೆ ಇಷ್ಟು ದಿನ, ಗೊತ್ತಾ ಸೋನು? ಈಗ ನೀನು ಸಿಕ್ಕಿದ್ದು ನನ್ನ ಅದೃಷ್ಟ 'ಆಯ್ ಲವ್ ಯು ಸೋನು', " ಎಂದು ನನಗರಿವಿಲ್ಲದೆ ಹೇಳಿಬಿಟ್ಟಿದ್ದೆ. ನಂತರ ಸೋನು ಒಂದು ಮಾತನಾಡಲಿಲ್ಲ. ಕಿಟಕಿಯಿಂದ ಸುರಿಯುವ ಮಳೆಯನ್ನು ನೋಡುತ್ತಾ ಏನೋ ಯೋಚಿಸುತ್ತಿದ್ದಳು. ನನಗೆ ತುಂಬಾ ಬೇಜಾರಾಯಿತು. ನಾನು ಆತುರ ಪಟ್ಟೆ ಅನಿಸಿತು. 
         ನಾನು ಇನ್ನೊಮ್ಮೆ ಹೇಳಿದೆ, ಈ ಸೋನೆ ಮಳೆಯ ಆಣೆ ಕಣೆ ನಾನು ನಿನ್ನ ಇಷ್ಟ ಪಡ್ತೀನಿ, ತುಂಬಾ ಪ್ರೀತಿಸ್ತೀನಿ, ನೀನಿಲ್ಲದ ನಾನು ನೀರಿಲ್ಲದ ಮೀನು  ಎಂದೆ ಎಮೋಶ್ನಲ್ ಆಗಿ, "ನಂಗು ನೀನಂದ್ರೆ ಇಷ್ಟ ಆದ್ರೆ ಇದೆಲ್ಲಾ ಸಾಧ್ಯನ? ಸ್ವಲ್ಪ ಯೋಚಿಸು ನಮ್ಮ ಅಮ್ಮ ಒಪ್ಪಿದರು ನಿಮ್ಮ ಮನೆಯಲ್ಲ್ಲಿ ಒಪ್ಪಲ್ಲ. ಮೊದಲೇ ನಮ್ಮನು ಕಂಡರೆ ಆಗಲ್ಲ ಅದನ್ನೇ ಯೋಚಿಸುತಿದ್ದೆ '' ಅಂದಳು.
 
      " ನಾವು ಅವರನ್ನು ಒಪ್ಪಿಸೋಣ ದ್ವೇಷದ ಜಗದಲ್ಲಿ ಪ್ರೀತಿ ಮೂಡಿಸೋಣ, ಯಾರೆನೆಂದರೂ ಸರಿ ನಾನಂತು ನಿನ್ನೆ ಮದುವೆಯಾಗೋದು ಇನ್ನೆರಡು ವರ್ಷ M.Sc ಮುಗಿಸಿ ಜಾಬ್ ಮಾಡ್ತೀನಿ ಅಲ್ಲಿವರೆಗೆ ನೀನು ನಿನ್ನ ಓದು ಮುಗಿಸು ಕಡಮೆ ಅಂದ್ರು 3 ರಿಂದ 4 ವರ್ಷ ಟೈಮ್ ಇದೆ " ಎಂದೆ. ಓಕೆ ಆದ್ರೆ ಭಯ ಆಗತ್ತೆ ಎಂದು ನಾಚಿಕೆ ಮಿಶ್ರಿತ ಭಯದಿಂದ ನನ್ನೆದೆಗೊರಗಿದಳು. ನಮ್ಮ ಪ್ರೀತಿಗೆ ಸ್ವರ್ಗ ಲೋಕವೇ ಅಸ್ತು ಎಂದು ಧಾರಾಕಾರ ಮಳೆ ಸುರಿಸಿ ಆಶಿರ್ವದಿಸಿತ್ತು 
 
            " ರೀ ರೀ ಏನ್ ಯೋಚಿಸ್ತಿದಿರಾ? '' ಎಂಬ ಸೌಮ್ಯಳ ದ್ವನಿ ಕೇಳಿ, ವಾಸ್ತವಕ್ಕೆ ಬಂದೆ. ಏನಿಲ್ಲಾ ಸೋನು ನೀನು ಧಾರವಾಡದಲ್ಲಿ ಬೇಟಿಯಾದ  ಸನ್ನಿವೇಶ ನೆನಸಿಕೊಳ್ಳುತಿದ್ದೆ, ಎಂದು ನಕ್ಕೆ. "ಸರಿ ಆಮೇಲೆ ನಿದಾನವಾಗಿ ನೆನೆಸಿಕೊಳ್ಳುವಿರಂತೆ, ಅಮ್ಮ ಬಸ್ ಸ್ಟ್ಯಾಂಡ್ ಗೆ ಬಂದಾಯ್ತು ಕರೆದುಕೊಂಡು ಬನ್ನಿ" ಎಂದು ನಗುತ್ತಾ ಅಡಿಗೆ ಮನೆಗೆ ಹೋದಳು. ನಮ್ಮ ಮದುವೆಯಾಗಿ ವರ್ಷವಾಗಿದೆ. ಹಿರಿಯರನ್ನು ಒಪ್ಪಿಸಿ, ಅವರ ದ್ವೇಷಕ್ಕೆ ತೆರೆ ಎಳೆದು ನನ್ನ ಸೋನುವನ್ನು ನನ್ನವಳನ್ನಾಗಿ ಮಾಡಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೆ. 
 
                 "ರೀ ಹೊರಟ್ರಾ..." ಎಂಬ ಮಾತು ಕೇಳಿ ಬಂತು. "ಹಾಂ ಹೊರಟೆ" ಎನ್ನುತ್ತಾ ಕಾರ್ ಚಲಾಯಿಸಿದೆ.